ರಸ್ತೆ ದುರಸ್ತಿಗೆ ಆಗ್ರಹಿಸಿ ಕೆಸರು ನೀರು ಮೈಮೇಲೆ ಸುರಿದುಕೊಂಡು ವಿನೂತನ ಪ್ರತಿಭಟನೆ

ತುರುವೇಕೆರೆ : ರಸ್ತೆ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ಕೆಸರು ನೀರನ್ನು ಮೈ ಮೇಲೆ ಸುರಿದುಕೊಂಡು ಸ್ಥಳಿಯರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ತಾಲೂಕಿನ ಹುಲಿಕೆರೆ ರಸ್ತೆ ಸಾಕ್ಷಿಯಾಯಿತು.
ಈ ಕುರಿತು ಮಾತನಾಡಿದ ಗುರುದತ್ ಹುಲಿಕೆರೆ ಮಾರ್ಗದುದ್ದಕ್ಕೂ ಗುಂಡಿ ಬಿದ್ದ ರಸ್ತೆಯ ಮೂಲಕವೇ ಕಾಲೇಜಿಗೆ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ವಯೋವೃದ್ದರು, ಗರ್ಭಿಣಿಯರು, ನಿತ್ಯದ ಕೆಲಸಕ್ಕಾಗಿ ನಾಗರೀಕರು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಲಕ್ಷ್ಮೀಪೂಜೆ ಆಗದ ಹೊರೆತು ಕಾಮಗಾರಿಗೆ ಶಾಸಕರು ಪೂಜೆ ಮಾಡುವುದಿಲ್ಲವಂತೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿ ಹರ್ಷಿತಾ ಮಾತನಾಡಿ ನಾವು ನಿತ್ಯವೂ ಕಾಲೇಜಿಗೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಿದೆ. ಕೆಲ ಸಮಯ ಬಸ್ ಬರದಿದ್ದ ವೇಳೆ ಅಧಿಕಾರಿಗಳನ್ನು ಪ್ರಶ್ನಿಸಿದರೇ ರಸ್ತೆ ದುರಸ್ತಿಯಾಗದ ಹೊರೆತು ಬಸ್ ಬಿಡುವುದಿಲ್ಲ ಎನ್ನುತ್ತಾರೆ. ಕಾಲೇಜಿಗೆ ಸಕಾಲಕ್ಕೆ ತಲುಪಲಾಗುತ್ತಿಲ್ಲ. ಶಾಸಕರು ಈ ಕೂಡಲೇ ರಸ್ತೆ ನಿರ್ಮಾಣ ಮಾಡಿಕೊಡಬೇಕು ಇಲ್ಲವಾದಲ್ಲಿ ಹೆದ್ದಾರಿ ತಡೆದು ವಿಧ್ಯಾರ್ಥಿಗಳು ಪ್ರತಿಭಟನೆ ಮಾಡುತ್ತೇವೆಂದು ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದೇವೆ ಎಂದರು.
ಹುಲಿಕೆರೆ ಗ್ರಾಮದ ಮಹಿಳೆ ಮಾತನಾಡಿ ಈ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸಂಚರಿಸಲಾಗುತ್ತಿಲ್ಲ. ರಸ್ತೆಗಳಲ್ಲಿ ಬಿದ್ದ ಗುಂಡಿಗಳಲ್ಲಿ ವಾಹನ ಚಲಾಯಿಸುವ ವೇಳೆ ಆಯ ತಪ್ಪಿ ಬಿದ್ದು ಕೈ ಕಾಲು ಮುರಿದುಕೊಳ್ಳುವಂತಾಗಿದೆ. ಶಾಸಕರು ಈ ಕೂಡಲೇ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ರಸ್ತೆಯ ಮದ್ಯೆ ನೀರು ತುಂಬಿರುವ ಮಂಡಿಯುದ್ದದ ಗುಂಡಿಗಳಲ್ಲಿಯೇ ಕೆಸರುಮಯ ನೀರನ್ನು ಮೈ ಮೇಲೆ ಸುರಿದು ಕೊಂಡು ಆಡಳಿತ ವ್ಯವಸ್ಥೆ ವಿರುದ್ದ ಕಿಡಿಕಾರಿದರು. ರಸ್ತೆಗಾಗಿ ಆಗ್ರಹ ಪೂರ್ವಕ ಘೋಷಣೆಯ ನಡುವೆ ಶಾಸಕರಿಗೆ ಧಿಕ್ಕಾರ ಸಹ ಕೂಗಿದರು, ಇಂದು ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೇ ಉಗ್ರ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಒಕ್ಕೊರಲಿನಿಂದ ಧ್ವನಿ ಮಾಡಿದರು.
ಗ್ರಾಮಸ್ಥರುಗಳಾದ ಲೋಕೇಶ್, ರೇಣುಕಪ್ಪ,ಶೇಖರ್,ಲಿಖಿತಾ,ಜಯಪ್ರಕಾಶ್, ಹಾಲೇಗೌಡ, ಗೋವಿಂದರಾಜ್, ಚಿತ್ರಶ್ರೀ,ಶ್ವೇತಾ, ನಾಗರಾಜ್, ಸೇರಿದಂತೆ ಅನೇಕರು ಇದ್ದರು.