ಜಿಲ್ಲೆತುಮಕೂರುರಾಜ್ಯಸುದ್ದಿ

ಬುದ್ದ,ಬಸವ,ಅಂಬೇಡ್ಕರ್ ಅವರ ವಿಚಾರಧಾರೆಗಳು ಮೂಲೆಗುಂಪಾಗದಂತೆ ಕಾಯುವ ಕೆಲಸವಾಗಬೇಕು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ

ತುಮಕೂರು: ಕಳೆದ 70 ವರ್ಷಗಳಿಂದ ಅಂಬೇಡ್ಕರ್ ಅನುಯಾಯಿಗಳು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುವವನ್ನು ಕಾಯುವ ಕೆಲಸ ಮಾಡುತ್ತಿದ್ದು,ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಭೂಮಿ ಇರುವರೆಗೂ ಇರಬೇಕೆಂದರೆ, ಮತ್ತಷ್ಟು ಎಚ್ಚರಿಕೆಯಿಂದ ಕಾಯುವ ಕೆಲಸವನ್ನು ಮುಂದುವರೆಸಬೇಕಾದ ಅಗತ್ಯತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ.

ನಗರದ ಏಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾ ಡುತಿದ್ದ ಅವರು,ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಜೊತೆಗೆ,ಅರ್ಥಿಕ ಸಮಾನತೆ ದೊರೆಯಬೇಕಾದರೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ ಎಂದರು.
ಗಾAಧಿ, ನೆಹರು ವಿಚಾರಧಾರೆಗಳು ಇಂದು ಮೂಲೆಗೆ ಸರಿದಿವೆ.ಆದರೆ ಬುದ್ದ,ಬಸವ,ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಂತಹ ಸ್ಥಿತಿ ಬರದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ.ಒಂದು ವೇಳೆ ಈ ವಿಚಾರಧಾರೆಗಳು ಮೂಲೆಗುಂಪಾದರೆ ಸೃಷ್ಟಿಯೇ ಮುಗಿದಂತೆ ಎಂದು ಮಾರ್ಮಿಕವಾಗಿ ನುಡಿದ ಸಚಿವ ಸತೀಶ್ ಜಾರಕಿಹೋಳಿ, ಅರ್ಥಿಕವಾಗಿ ಸಬಲರಾಗಿರುವ ದಲಿತರು, ತಮ್ಮದೇ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಆಗಬೇಕು.ಸರಕಾರಿ ನೌಕರಿ ಹೊಂದಿರುವ ದಲಿತರು,ತಮ್ಮದೆ ಸಮುದಾಯದ ಬಡವರ ಮಕ್ಕಳನ್ನು ದತ್ತು ಪಡೆದು,ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಾಗಿದೆ.ಬಡವರು, ದಲಿತರ ಶೈಕ್ಷಣಿಕ ಅಭಿವೃದ್ದಿ ಕೇಂದ್ರಗಳಾದ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸವೂ ನಮ್ಮ ಅದ್ಯತೆಯಾಗಬೇಕಿದೆ ಎಂದು ಸಚಿವರು ನುಡಿದರು.

ರಾಜ್ಯದ ಯಾವುದೇ ಮೂಲೆಯಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆದರು ಮೊದಲು ಸಂತ್ರಸ್ಥರ ಜೊತೆ ನಿಲ್ಲುವುದು ದಸಂಸ ಎಂಬ ಹೆಗ್ಗಳಿಕೆ ನಮ್ಮದು. ಅಂಬೇಡ್ಕರ್ ಒಂದು ವರ್ಗದ ಒಳಿತಾಗಿ ಕೆಲಸ ಮಾಡಲಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಕೆಲಸ ಮಾಡಿದರು ಎಂಬುದನ್ನು ನಮ್ಮ ಯುವಜನತೆ ತಿಳಿಸುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ವಿಚಾರಧಾರೆ ಯನ್ನು ಬಿತ್ತುವ ಕೆಲಸ ಆಗಬೇಕಾಗಿದೆ.ದಲಿತಪರ, ಜೀವ ಪರ ಹೋರಾಟಗಾರರಿಗೆ ಸಂಪನ್ಮೂಲದ ಕೊರತೆ ಇರುವುದು ಸಹಜ.ಸಂವಿಧಾನದ ಅಡಿಯಲ್ಲಿ ಅಧಿಕಾರ, ಅಂತಸ್ಥು ಪಡೆದವರು ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ವಿಘಟನೆಯಾಗಿರುವ ಎಲ್ಲಾ ದಲಿತಪರ ಸಂಘಟನೆಗಳು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಒಗ್ಗೂಡಿ ಎದುರಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗೆ ಇರಲಿದ್ದೇನೆ ಎಂದು ಸತೀಶ್ ಜಾರಕಿಹೋಳಿ ಭರವಸೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ,ಪ್ರತಿಯೊಂದು ಮಾನವ ವಿರೋಧಿ, ಜೀವ ವಿರೋಧಿ ಪ್ರಕ್ರಿಯೆಗಳಿಗೆ ದಸಂಸ ಪ್ರತಿಕ್ರಿಯಿಸಿದೆ.ದಲಿತರ ಸ್ವಾಭಿಮಾನದ ಹಾಡುಗಳು ಮನರಂಜನೆಯ ಸರಕು ಗಳಾಗದೆ,ಆಲೋಚನೆಗಳಾಗಬೇಕು.ಏಕವ್ಯಕ್ತಿ, ಏಕ ಭಾಷೆ,ಏಕ ರೂಪದ ಉಡುಪು,ಏಕ ಚುನಾವಣೆ ಇಂತಹ ವಿಚಾರಗಳ ಹಿಂದಿರುವ ಸಾಂಸ್ಕೃತಿಕ ರಾಜಕಾರಣವನ್ನು ದಲಿತ ಸಮುದಾಯ,ಅದರಲ್ಲಿಯೂ ದಲಿತ ಯುವ ಸಮುದಯ ಅರ್ಥಮಾಡಿ ಕೊಳ್ಳಬೇಕಿದೆ.ಹಾಗಾಗಿ ಬುದ್ದ ಭಾರತದಲ್ಲಿ ಜರ್ಮನಿಯ ನಾಜಿ ವಾದವನ್ನು ಬಿತ್ತಲು ನಾವು ಎಂದಿಗೂ ಬೀಡಬಾರದು. ರಾಜಪ್ರಬುತ್ವ ಸ್ಥಾಪನೆಯ ಹುನ್ನಾರವನ್ನು ತಡೆಯಬೇಕಿದೆ.2025-26ರಲ್ಲಿ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರಚನೆಯಾಗಲಿದ್ದು, ರಾಜಪ್ರಭುತ್ವವನ್ನು ಪ್ರತಿಪಾದಿಸುವ ಉತ್ತರಭಾರತ ಎಂ.ಪಿ ಗಳ ಸಂಖ್ಯೆ 600 ದಾಟಿದರೆ,ದ್ರಾವಿಡ ಆಲೋಚನೆಯ ದಕ್ಷಿಣ ಭಾರತದ ಎಂ.ಪಿಗಳ ಸಂಖ್ಯೆ 160 ದಾಟುವುದು ಕಷ್ಟ. ಉತ್ತರ ಭಾರತದವರ ಸುಖಃಕ್ಕೆ ದಕ್ಷಿಣ ಭಾರತದ ಜನರು ದುಡಿಯಬೇಕಾದ ಅಪಾಯ ಬಂದೊಗಲಿದೆ.ಮುಂದಿನ ದಿನಗಳು ಮತ್ತಷ್ಟು ಕಠೋರವಾಗಲಿರುವೇ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ನುಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ,ಪ್ರೊ..ಬಿ.ಕೆ. ತಮ್ಮ ಇಡೀ ಜೀವನವನ್ನೇ ಶೋಷಿತ ಸಮುದಾಯಗಳ ಏಳಿಗೆಗಾಗಿ ಮುಡಿಪಾಗಿಟ್ಟವರು.ಸವಲತ್ತುಗಳೇ ಇಲ್ಲದ ಕಾಲದಲ್ಲಿ ಇಡೀ ರಾಜ್ಯ ಸುತ್ತಿ ದಸಂಸದವನ್ನು ಪ್ರಬಲವಾಗಿ ಕಟ್ಟಿದರು.ಅವರು ಏನು ಹೇಳುತ್ತಾರೆ ಎಂಬುದನ್ನು ಒಂದು ಸರಕಾರ ಕಾದು ನಿಂತು ಕೇಳಿ ಜಾರಿಗೆ ತರುತ್ತಿತ್ತು.ಜಾರಿಯಲ್ಲಿರುವ ಭೂಮಿ ಹಕ್ಕು, ಪಿಟಿಸಿಎಲ್ ಕಾಯ್ದೆ, ದರಕಾಸ್ತು, ವಸತಿ ಶಾಲೆಗಳು, ಬ್ಯಾಕ್‌ಲಾಗ್ ಹುದ್ದೆ ತುಂಬುವುದು.ಬಡ್ತಿ ಮೀಸಲಾತಿ ಎಲ್ಲವೂ ದಲಿತ ಸಂಘರ್ಷ ಸಮಿತಿಯ ಬೇಡಿಕೆಗಳಾಗಿದ್ದವು ಎಂದರು.

ದಲಿತರ ಹಕ್ಕುಗಳಿಗೆ ರಕ್ಷಣೆಯಾಗಿರುವ ಸಂವಿಧಾನದ ರಕ್ಕೆಗಳನ್ನು ಕತ್ತರಿಸುವ ಕೆಲಸವನ್ನು ಕೆಲವರು ಮಾಡುತಿದ್ದಾರೆ.ಇದನ್ನು ಆರಂಭದಿಂದಲೂ ದಸಂಸ ವಿರೋಧಿಸಿಕೊಂಡೇ ಬರುತ್ತಿದೆ.ಇದರ ಭಾಗವಾಗಿಯೇ ಇಂದು ಪ್ರತಿ ಶಾಲೆಯಲ್ಲಿ ಸಂವಿಧಾನ ಆಶ್ರಯಗಳನ್ನು ಓದುವ ಕೆಲಸ ಆರಂಭವಾಗಿದೆ.ಹಾಗೆಯೇ ಸರಕಾರವೇ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದೆ. ಇದನ್ನು ದಸಂಸ ಹೋರಾಟದ ಫಲ. ರಾಜಪ್ರಭುತ್ವದಲ್ಲಿ ಶೋಷಿತರಿಗೆ ಮೀಸಲಾತಿ ನೀಡಿದ ಶಾಹು ಮಹರಾಜ್ ಅವರಿಗೆ ಚರಿತ್ರೆಯ ಪುಟಗಳಲ್ಲಿ ಸ್ಥಾನವಿಲ್ಲ.ಆದರೆ ಅದನ್ನು ವಿರೋಧಿಸಿದ ಬಾಲಗಂಗಾಧರನಾಥ ತಿಲಕ್ ಅವರಿಗೆ ಲೋಕಮಾನ್ಯ ರಾಗಿದ್ದಾರೆ. ಬಹುಜನ ಚಳವಳಿ ಆರಂಭವಾದ ನಂತರ ಇತಿಹಾಸದಲ್ಲಿ ಶಾಹು ಮಹಾರಾಜ್, ಸಾವಿತ್ರಿ ಬಾಯಿ ಪುಲೆ ಅಂತಹವರು ಜಗತ್ತಿಗೆ ಪರಿಚಿತರಾಗುತಿದ್ದಾರೆ.ಅಂಬೇಡ್ಕರ್ ಅವರು ವಿಚಾರಧಾರೆಗಳು ಕಸದ ಬುಟ್ಟಿಗೆ ಸೇರಿದಂತೆ ಎಚ್ಚರಿಕೆಯನ್ನು ನಾವೆಲ್ಲರೂ ವಹಿಸಬೇಕಾಗಿದೆ ಎಂದು ಮಾವಳ್ಳಿ ಶಂಕರ್ ನುಡಿದರು.
ದಸಂಸ ಹಿರಿಯ ಸದಸ್ಯ ಕುಂದೂರು ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ,ಒಳಮೀಸಲಾತಿ ತೀರ್ಪು ಬಂದು ತಿಂಗಳು ಕಳೆದರೂ ಸರಕಾರಗಳು ಅವುಗಳ ಜಾರಿಗೆ ಮೀನಾಮೇಷ ಎಣಿಸುತ್ತಿರುವುದರ ಪರಿಣಾಮ ಶೋಷಿತ ಸಮುದಾಯಗಳಲ್ಲಿ ಹೆಚ್ಚು ಒಡಕು ಉಂಟಾಗುತ್ತಿದೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿಗೆ ಬರಬೇಕಾಗಿದೆ. ಹಾಗೆಯೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಸೇರಿದಂತೆ ಕಿರು ಹಣಕಾಸು ಸಂಸ್ಥೆಗಳು ಮಹಿಳೆಯರ ಮಾನ, ಪ್ರಾಣ ಹರಣಕ್ಕೆ ಕಾರಣವಾಗಿದ್ದು, ಸರಕಾರ ಕೂಡಲೇ ಇವುಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಆನಂತನಾಯ್ಕ್,ವಿರೂಪಾಕ್ಷ ಡ್ಯಾಗೇರಹಳ್ಳಿ, ,ಮುರುಳಿ ಕುಂದೂರು,ಚೇಳೂರು ಶಿವನಂಜಪ್ಪ,ಗಾನ ಅಶ್ವಥ್,ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ಮುಖಂಡರಾದ ರವೀಂದ್ರ ಹೊಸಕೋಟೆ, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker