ತುಮಕೂರು : ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರದೇ ಶಕ್ತಿ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ತುಮಕೂರು ದಸರಾ 2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ರಾಜ್ಯ ಬಾಲಭವನ ಸೊಸೈಟಿ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕ್ರೀಡಾ ದಸರಾ ಹಾಗೂ ಮಹಿಳಾ ದಸರಾ ರಂಗೋಲಿ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವೇಗವಾಗಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಪಾತ್ರ ಏನೆಂಬುದನ್ನು ಅರ್ಥೈಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನಿಗಧಿಪಡಿಸಿದ ಬಳಿಕ ಇಂದು ದೇಶದಾದ್ಯಂತ 14 ಲಕ್ಷ ಮಹಿಳೆಯರು ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ ಎಂದರು.
ದೇಶದ ಎಲ್ಲಾ ವಲಯದಲ್ಲಿಯೂ ಮಹಿಳೆಯರು ತಮ್ಮ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಎಂದಿಗೂ ಸಮರ್ಥರು ಎಂದು ಸಚಿವರು ಹೇಳಿದರು.
ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಯಬೇಕು. ಈ ಹಿನ್ನೆಲೆಯಲ್ಲಿ ತುಮಕೂರು ದಸರಾ ಆಚರಣೆಯಲ್ಲಿ ರಂಗೋಲಿ ಸ್ಪರ್ಧೆ ಮತ್ತಿತರ ಗ್ರಾಮೀಣ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿದೆ. ತುಮಕೂರು ದಸರಾದಲ್ಲಿ ನಮ್ಮ ಜಿಲ್ಲೆಯ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಹರ್ಷ ತಂದಿದೆ ಎಂದರು.
ಜ್ಞಾನವನ್ನು ಹೆಚ್ಚಿಸುವ ಗ್ರಾಮೀಣ ಆಟಗಳು ಕಣ್ಮರೆ
ಮನುಷ್ಯನ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತಿದ್ದ ಅಳು-ಗುಣಿಮನೆ, ಕುಂಟೆ-ಬಿಲ್ಲೆ, ಹಗ್ಗ- ಜಗ್ಗಾಟ, ಲಗೋರಿ, ಚಿನ್ನಿದಾಂಡಿನಂತಹ ಗ್ರಾಮೀಣ ಆಟಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಲು ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಪ್ರಯೋಜಕಾರಿಯಾಗಿವೆ ಎಂದು ತಿಳಿಸಿದರು.
ಗಿಡ-ಮರಗಳನ್ನೇ ತಮ್ಮ ಮಕ್ಕಳಂತೆ ಬೆಳಸಿ ವೃಕ್ಷಮಾತೆ ಎನಿಸಿಕೊಂಡಿರುವ ಸಾಲು ಮರದ ತಿಮ್ಮಕ್ಕನವರು ಮಹಿಳಾ ದಸರಾ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ತಮಗೆ ಮಕ್ಕಳಿಲ್ಲದ ಕಾರಣ ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ತುಮಕೂರು ದಸರಾ ಅತ್ಯಂತ ಯಶಸ್ಸಿನ ಹೊಸ್ತಿಲಲ್ಲಿ ಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ಸಜ್ಜುಗೊಳ್ಳುತ್ತಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಸಕ ಹೆಚ್. ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎನ್. ಚೇತನ್ ಕುಮಾರ್, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯದ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲ್ಲಪ್ಪ ಹಾಗೂ ಅಂಜನ್ ಮೂರ್ತಿ, ಅಧಿಕಾರೇತರ ಸದಸ್ಯರಾದ ತುಮಕೂರು ದಸರಾ ಸಮಿತಿ ಕುಮುದಾ ಹರೀಶ್, ಮುಖಂಡರು ಹಾಗೂ ಸಮಾಜ ಸೇವಕ ನಾಗಮಣಿ, ಪತ್ರಕರ್ತರಾದ ನಾಗರತ್ನ ಶಿವಣ್ಣ, ಸಾ.ಚಿ. ರಾಜ್ಕುಮಾರ್, ಕಮಲ ಗಂಗಹನುಮಯ್ಯ ಮತ್ತಿತರರು ಭಾಗವಹಿಸಿದ್ದರು.
ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳಿಗೆ ಸಚಿವರಿಂದ ಸನ್ಮಾನ :-
ತುಮಕೂರು ದಸರಾ ಉತ್ಸವ ಪ್ರಯುಕ್ತ ವಿವೇಕಾನಂದ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ೩ನೇ ತುಮಕೂರು ದಸರಾ ಸ್ಪೋರ್ಟ್ಸ್ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಅಂತರರಾಷ್ಟಿçÃಯ ಮಟ್ಟದ ಜೂನಿಯರ್ ವರ್ಲ್ಡ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗಾಂಭೀರ್ಯ ವಿ ಗೌಡ ಹಾಗೂ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಹಾಗೂ ರೆಕಾರ್ಡ್ ಹೋಲ್ಡರ್ ಜೊನಾಥನ್ ಗ್ಯಾವಿನ್ ಆಂಟೋನಿ, ರಾಷ್ಟç ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತರಾದ ಮಹಾಲಕ್ಷ್ಮಿ, ಜಿ. ಅದಿತಿ ಅವರನ್ನು ಸಚಿವರು ಸನ್ಮಾನಿಸಿದರು