ಗೂಳೂರಿನಲ್ಲಿ 40 ಲಕ್ಷ ರೂಗಳ ವೆಚ್ಚದಲ್ಲಿ ಗಣಪತಿ ದೇವಾಲಯದ ಆರ್ಚ್ ನಿರ್ಮಾಣ : ಶಾಸಕ ಡಿ.ಸಿ ಗೌರಿಶಂಕರ್

ತುಮಕೂರು : ಗ್ರಾಮಾಂತರ ಕ್ಷೇತ್ರದ ಇತಿಹಾಸ ಪ್ರಸಿದ್ಧ ಶ್ರೀ ಗೂಳೂರು ಮಹಾ ಗಣಪತಿ ಜಾತ್ರಾ ಮಹೋತ್ಸವದ ಅಂಗವಾಗಿ ಜೆಡಿಎಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಡಿ.ಸಿ ಗೌರಿಶಂಕರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ
ಉತ್ತಮ ಮಳೆ ಬೆಳೆಯಾಗಿ, ಪ್ರತಿ ವರ್ಷ ಗೂಳೂರು ಹಾಗೂ ತಾಲೂಕಿನದ್ಯಾಂತ ಎಲ್ಲಾ ಕೆರೆಗಳು ತುಂಬಿ ಕೋಡಿ ಬೀಳಲಿ, ರೈತರು ಸಂತಸದಿಂದ ಹಾಗೂ ಕ್ಷೇತ್ರದ ಜನತೆ ನೆಮ್ಮದಿಯಾಗಿರಲೆಂದು ಪ್ರಾರ್ಥಿಸಿದರು.
ಪೂಜಾ ಕಾರ್ಯಕ್ರಮದ ಬಳಿಕ ಶಾಸಕ ಡಿ.ಸಿ ಗೌರಿಶಂಕರ್ ಮಾತನಾಡಿ ತನ್ನ ಅವಧಿಯಲ್ಲಿ ಗೂಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಗಳ ವೆಚ್ಚದಲ್ಲಿ ಪ್ರಾಮಾಣಿಕವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು, ಗೂಳೂರು ಗ್ರಾಮದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ಗಣಪತಿ ದೇವಾಲಯದ ಆರ್ಚ್ ನಿರ್ಮಾಣ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಪ್ರತಿ ವರ್ಷ ದೇವಾಲಯಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿದ್ದು, ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ, ಮುಂದಿನ ವರ್ಷದ ಜಾತ್ರೆಯೊಳಗೆ ತಮ್ಮ ಸ್ವಂತ ಹಣದಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೂಳೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ,ಮಾಜಿ ಎಪಿಎಂಸಿ ಉಪಾಧ್ಯಕ್ಷೆ ಹಾಗೂ ಗ್ರಾಮಪಂಚಾಯ್ತಿ ಸದಸ್ಯೆ ವಿಜಯಕುಮಾರಿ ಪಾಲನೇತ್ರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ, ಸ್ಥಳೀಯ ಹಾಗೂ ಅಕ್ಕಪಕ್ಕದ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು, ಕಾರ್ಯಕರ್ತ ಬಂಧುಗಳು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.