ರೈತರ ನೆರವಿಗೆ ಧಾವಿಸದ ಸಚಿವ ಮಾಧುಸ್ವಾಮಿ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಹುಳಿಯಾರು: ಬೀದಿಬದಿ ವ್ಯಾಪಾರಿಗಳಿಗೆ ಫುಟ್ಫಾತ್ನಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸಲು ಅವಕಾಶ ನೀಡದ ಅಮಾನವೀಯತೆಯಿಂದ ವರ್ತಿಸುವ ಸಚಿವರು ಯಾವ ಸೀಮೆ ಜನಪ್ರತಿನಿಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೆ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣಕ್ಕೆ ಬುಧವಾರ ರಾತ್ರಿ ತಡವಾಗಿ ಆಗಮಿಸಿದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದರು.
ಈ ಕ್ಷೇತ್ರದ ಮಂತ್ರಿಗಳು ವಿಧಾನಸಭೆಯಲ್ಲಿ ಮಾತನಾಡುವ ಶೈಲಿ ನೋಡಿದ್ದೇನೆ. ಆದರೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜನರಿಂದ ಮತ ಪಡೆದು ಗೆದ್ದಿರುವ ಮಂತ್ರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಜನಸಾಮಾನ್ಯರ ಮೇಲೆ ದರ್ಪ ತೋರಿಸಿರುವುದು ನಾಚಿಕೆಗೇಡಿತನವಾಗಿದೆ ಎಂದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರಿಗೆ ಆಸರೆಯಾಗಿರುವ ರಾಗಿ ಮತ್ತು ಕೊಬ್ಬರಿ ಬೆಲೆ ಬಿದ್ದೋಗಿದೆ. ರೈತರ ಮೇಲೆ ನೈಜ ಕಾಳಜಿಯಿದ್ದರೆ ತಕ್ಷಣ ಸಚಿವರು ಬೆಳೆಗಾರರ ನೆರವಿಗೆ ಧಾವಿಸಬೇಕಿತ್ತು. ಆದರೂ ಮೌನಕ್ಕೆ ಶರಣಾಗಿ ರೈತರು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದರಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಹಾಗೂ ರಾಗಿಗೆ ಉತ್ತಮ ಬೆಲೆ ನೀಡುವುದಾಗಿ ತಿಳಿಸಿದರು.
ಮನೆ, ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಹೀಗೆ ನೂರಾರು ಸಮಸ್ಯೆಗಳನ್ನು ಹೊತ್ತುಕೊಂಡು ನನ್ನ ಮನೆ ಬಾಗಿಲಿಗೆ ನಿತ್ಯ ಸಾವಿರಾರು ಜನಸಾಮಾನ್ಯರ ಬರುತ್ತಾರೆ. ಅವರ ಅಳಲನ್ನು ಕಂಡು ರಾಜ್ಯದ ಬಡವರು, ರೈತರು ನಮ್ಮೆದಿಯಿಂದ ಜೀವನ ಸಾಗಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಪಂಚರತ್ನ ಯೋಜನೆ ಹುಟ್ಟಿಕೊಂಡಿದೆ ಎಂದರು.
ನಾನು 10 ವರ್ಷ ಪೂರ್ಣ ಪ್ರಮಾಣದ ಅಧಿಕಾರ ಕೊಡಿ ಎಂದು ಕೇಳುತ್ತಿಲ್ಲ. ಒಂದೇ ಒಂದು ಬಾರಿ ಕೇವಲ 5 ವರ್ಷ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟರೆ ರಾಜ್ಯವನ್ನು ಅಭಿವೃದ್ಧಿ ರಾಜ್ಯವಾಗಿ ಜನರು ನೆಮ್ಮದಿ, ಸುಖ, ಶಾಂತಿಯಿಂದ ಇರುವಂತೆ ಮಾಡುತ್ತೇನೆ. ಇದೂವರೆವಿಗೂ 2 ಪಕ್ಷಕ್ಕೂ ಅಧಿಕಾರ ಕೊಟ್ಟಿದ್ದೀರಿ. ದೊಡ್ಡ ಮನಸ್ಸು ಮಾಡಿ ರಾಜ್ಯದ ಜನ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರ ಕೊಡಿ ಎಂದು ಕೇಳಿಕೊಂಡರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಪಂ.ವ್ಯಾಪ್ತಿಯಲ್ಲಿ 30 ಹಾಸಿಗೆಯ ಸುಸರ್ಜಿತವಾದ ಆಸ್ಪತ್ರೆಗಳ ನಿರ್ಮಾಣ ಮತ್ತು ದಿನದ 24 ಗಂಟೆ ಉತ್ತಮವಾದ ಚಿಕತ್ಸೆ ನೀಡುವ ವ್ಯವಸ್ಥೆ. ಬಿಪಿಎಲ್ ಕಾರ್ಡ್ಗಳ ಹೊಂದಿರುವ ಬಡವರಿಗೆ ಉತ್ತಮ ಆರೋಗ್ಯ ರಕ್ಷಣೆಗಾಗಿ ಉಚಿತವಾದ ಶಸ್ತçಚಿಕಿತ್ಸೆ ನೀಡುವ ಸೌಲಭ್ಯ ನೀಡಲಾಗುವುದು. ಪ್ರತಿ ಮುಂಗಾರು ಮಳೆ ಪ್ರಾರಂಭದಲ್ಲಿ ಬಿತ್ತನೆ ಬೀಜ, ಗೊಬ್ಬರ, ಬೇಸಾಯಕ್ಕಾಗಿ ಪ್ರತಿ ರೈತನ ಖಾತೆಗೆ ಒಂದು ಎಕರೆಗೆ 20 ಸಾವಿರ ರೂ.ನಂತೆ ಹಣ ನೀಡುತ್ತೇನೆ ಎಂದರು.
ಅಲ್ಲದೆ ಭೂಮಿ ಇಲ್ಲದವರಿಗೆ ಭೂಮಿ, ಮನೆ ಇಲ್ಲದವರಿಗೆ ಮನೆ, ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡುತ್ತೇವೆ, 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಯಾವುದೆ ಜಾತಿ ತಾರತಮ್ಯ ಇಲ್ಲದೆ ತಿಂಗಳಿಗೆ 5 ಸಾವಿರ ರೂ ಮಾಶಾಸನ ನೀಡುವ ಜೊತೆಗೆ ಸ್ತಿçÃಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನ ಮಾಡಲಾಗುವುದು ಎಂದರಲ್ಲದೆ ನಮ್ಮ ಅಭ್ಯರ್ಥಿ ಸಿ.ಬಿ.ಸುರೇಶ್ಬಾಬು ರವರಿಗೆ ಹೆಚ್ಚಿನ ಬೆಂಬಲ ನೀಡಿ ಗೆಲ್ಲಿಸಿಕೊಡಿ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.
ಶಾಲಾ ಮಕ್ಕಳಿಗೆ ಸೈಕಲ್ ಸ್ಥಗಿತ
ನಾನು ಮುಖ್ಯ ಮಂತ್ರಿಯಾಗಿದ್ದಾಗ ಗ್ರಾಮೀಣ ಪ್ರದೇಶದ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಸೈಕಲ್ ನೀಡುವ ಯೋಜನೆ ಜಾರಿಗೆ ತಂದೆ. ಆದರೆ ಇಂದಿನ ಸರಕಾರ ಎರಡು ವರ್ಷದಿಂದ ಸೈಕಲ್ ನೀಡದೆ ಯೋಜನೆ ಸ್ಥಗಿತಗೊಳಿಸಿದೆ ಎಂದು ದೂರಿದರು.
ಸರ್ಕಾರಿ ನೌಕರರ ಕಷ್ಟ ಕೇಳಲು ನಾನೇ ಬರಬೇಕು
ಬಿಎಂಟಿಸಿ, ಮತ್ತು ಕೆ.ಎಸ್.ಆ.ಟಿ.ಸಿ ಚಾಲಕರು, ನಿರ್ವಾಹಕರು ತಮ್ಮ ಬೇಡಿಕೆಗಳಿಗಾಗಿ ಸಾಕಷ್ಟು ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಅನುದಾನಿತ ಶಾಲಾ ಶಿಕ್ಷಕರು ಹೊರಾಟದ ಕಡೆ ಸರ್ಕಾರ ತಿರುಗಿಯೂ ಸಹ ನೋಡಿಲ್ಲ. ಇವರ ಬೇಡಿಕೆಗಳನ್ನೂ ಈಡೇರಿಸಲು ನಾನೇ ಅಧಿಕಾರಕ್ಕೆ ಬರಬೇಕು ಎಂದರು.
ಈ ವೇಳೆ ಮಾಜಿ ಶಾಸಕ ಸಿ.ಬಿ.ಸುರೇಶ್ಬಾಬು, ಜಿಪಂ.ಮಾಜಿ ಸದಸ್ಯರಾದ ರಾಮಚಂದ್ರಯ್ಯ, ಕಲ್ಲೇಶ್, ಪಪಂ.ಸದಸ್ಯರಾದ ಪ್ರೀತಿ ರಾಘವೇಂದ್ರ, ಮಂಜುನಾಯ್ಕ್, ಸೈಯದ್ ಜಹೀರ್ ಸಾಬ್, ಮುಖಂಡರಾದ ಗೌಡಿ, ಕೇಶವಪುರಕಿರಣ್, ಹರೀಶ್, ದೇವರಾಜ್ಗೌಡಾ, ಗಣೇಶ್, ಸಾದತ್, ತಿಮ್ಲಾಪುರ ದೇವರಾಜು, ಮೊದಲಾದವರು ಹಾಜರಿದ್ದರು.