
ತುಮಕೂರು : ಅನುಭಾವ ಹಾಗೂ ರಸಾನುಭವ ಎರಡು ಪ್ರೇಕ್ಷರಲ್ಲಿ ಮೂಡಿಸಲು ಸಾಧ್ಯವಿರುವುದು ರಂಗಭೂಮಿಗೆ ಮಾತ್ರ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
ನವೆಂಬರ್ 25ರ ಶುಕ್ರವಾರ ಸಂಜೆ ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗಮ ನಾಟಕ ಪ್ರಯೋಗದಲ್ಲಿ ಮಾತನಾಡಿದ ಅವರು. ವಚನಾಮೃತವೇ ದೊಡ್ಡ ಸಂಗಮ, ಹಳ್ಳಗಳೆಲ್ಲ ಸೇರಿ ನದಿ ಯಾದಂತೆ ಎಲ್ಲ ಪ್ರಕಾರವೂ ಸೇರಿ ಸಂಗಮಗೊಂಡಿರುವ ವಚನ ಸಾಹಿತ್ಯವನ್ನು ಆಧಾರಿಸಿ ಸಂಗಮ ನಾಟಕ ರೂಪಿಸಲಾಗಿದ್ದು, ವಚ ನಾಮೃತದ ರಸಾನುಭವದ ಸವಿಯನ್ನು ಸವಿಯೋಣ ಎಂದು ಕರೆ ನೀಡಿದರು.
ಕೇಂದ್ರ ನಾಟಕ ಅಕಾಡಮಿ ಪುರಸ್ಕೃತ ಲಕ್ಷಣ್ ದಾಸ್ ಮಾತನಾಡಿ, ರಂಗಭೂಮಿಯ ತೊಟ್ಟಿಲು ತುಮಕೂರಿನಲ್ಲಿ ರಂಗಚಟು ವಟಿಕೆಗಳು ಜೀವಂತವಾಗಿರುವುದಕ್ಕೆ ಹವ್ಯಾಸಿ ತಂಡಗಳೇ ಕಾರಣ, ಅನೇಕ ಪ್ರಯೋಗಗಳ ಮೂಲಕ ಜನಮನ್ನಣೆಯನ್ನು ಪಡೆದಿರುವ ಗ್ರಾಮೀಣ ಕ್ರೀಯಾತ್ಮಕ ರಂಗ ತಂಡ ಇನ್ನಷ್ಟು ಪ್ರಯೋಗಳನ್ನು ಮಾಡುವ ಮೂಲಕ ಜನಮನ್ನಣೆಯನ್ನು ಪಡೆಯಲಿ ಎಂದು ಹಾರೈಸಿದರು.
ಲೇಖಕಿ ಶೈಲಾ ನಾಗರಾಜ್ ಮಾತನಾಡಿ ರಂಗಕ್ರಿಯಾಶೀಲತೆ ನೈಜ ಬದುಕಿಗೆ ಹತ್ತಿರವಾದದ್ದು, ವಚನ ಸಾಹಿತ್ಯವೇ ವಿಶ್ವ ಸಾಹಿತ್ಯದ ಗಣಿ, ವಚನ ಸಾಹಿತ್ಯದ ಬೇರೆ ಬೇರೆ ಆಯಾಮವನ್ನು ಸಂಗಮದ ಹೆಸರಿನಲ್ಲಿ ಪ್ರಸ್ತುತ ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ವಚನ ಸಾಹಿತ್ಯ ರಂಗ ಪ್ರಯೋಗಕ್ಕೆ ಒಳಪಟ್ಟಷ್ಟು ಅದರ ಚಲನಶೀಲನತೆ ಹೆಚ್ಚುತ್ತದೆ ಅದಕ್ಕಾಗಿಯೇ ರಂಗ ಪ್ರಯೋಗ ನಿಂತ ನೀರಾಗದೇ ಉಳಿದುಕೊಂಡು ಜನ ಮಾನಸದಲ್ಲಿ ಉಳಿದು ಕೊಂಡಿದೆ, ಪ್ರಯೋಗಾತ್ಮಕ ನಾಟಕಗಳ ಸಂಖ್ಯೆ ಹೆಚ್ಚಳವಾಗಬೇಕು, ರಂಗ ನಿರಂತರತೆ ಬೆಳೆಯಲಿ ಎಂದು ಆಶಿಸಿದರು.
ಉಪನ್ಯಾಸಕ ಶಿವಣ್ಣ ತಿಮ್ಲಾಪುರ ಮಾತನಾಡಿ, ಕೆಟ್ಟಿತು ಕಲ್ಯಾಣ, ಸಂಕ್ರಾಂತಿಯನ್ನು ಯಶಸ್ವಿಯಾಗಿ ರಂಗ ಪ್ರಯೋಗಿಸಿರುವ ಗ್ರಾಮೀಣಾ ಕ್ರಿಯಾತ್ಮಕ ರಂಗ ತಂಡ ಈಗ ಸಂಗಮದ ಮೂಲಕ ವಚನ ಸಾಹಿತ್ಯದ ರಂಗ ಪ್ರಯೋಗಕ್ಕೆ ಮುಂದಾಗಿದ್ದು, ಪ್ರೇಕ್ಷಕರು ಮೆಚ್ಚಿ, ಪ್ರೋತ್ಸಾಹಿಸಬೇಕೆಂದು ಹೇಳಿದರು.
ಮುಖ್ಯಭೂಮಿಕೆಯಲ್ಲಿ ಬಾಲಾಜಿ, ಕಿರಣ್, ಕೃಷ್ಣ, ಎ.ವಿ.ನಾಗರಾಜಮೂರ್ತಿ, ಶಿಲ್ಪ, ನಾಗರಾಜು ಅರಕೆರೆ, ಸಿದ್ದರಾಮ, ಹೇಮಂತ್ ಕುಮಾರ್, ನವೀನ್, ಅಪೂರ್ವ, ಪುನೀತ್, ಲಕ್ಷ್ಮೀಶ್ರೀ, ಎಂ.ಪ್ರಸಾದ್, ಅರವಿಂದ್, ಶಶಿಧರ್ ಅಭಿನಯಿಸಿದರೆ, ಸಂಗೀತವನ್ನು ಪೂಜಾ ಎನ್, ವಿಷ್ಣು, ನವೀನ್ ಕುಮಾರ್ ಜಂಬೆ ವಾದ್ಯ ಒದಗಿಸಿದರು, ಕಾಂತರಾಜು ಕೌತಮಾರನಹಳ್ಳಿ ವಚನ ಸಾಹಿತ್ಯಕ್ಕೆ ರಂಗ ರೂಪವನ್ನು ನೀಡಿದ್ದರು, ರಂಗನಿರ್ವಹಣೆಯನ್ನು ಸಿದ್ದರಾಜು, ರಂಗನಿರ್ದೇಶನವನ್ನು ಶಿವಕುಮಾರ್ ತಿಮ್ಲಾಪುರ ನಿರ್ವಹಿಸಿದ್ದರು. ಪ್ರೇಕ್ಷಕ ಗಣ್ಯರಾಗಿ ರವಿಕುಮಾರ್ ನೀಹಾ, ಕಂಟಲಗೆರೆ ಸಣ್ಣಹೊನ್ನಯ್ಯ, ಸಿದ್ದಲಿಂಗಮೂರ್ತಿ ಸೇರಿದಂತೆ ರಂಗಭೂಮಿ ಆಸಕ್ತರು ಭಾಗವಹಿಸಿದ್ದರು.