
ತುಮಕೂರು :ಸುಮಾರು 48 ಜನ ಶಾಸಕರು ಹನಿಟ್ರಾಫ್ ಒಳಗಾಗಿರುವುದು ರಾಜ್ಯದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದ್ದು,ಗೃಹ ಇಲಾಖೆ ಮತ್ತು ಸರಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ, ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಅಂತರಿಕ ಕಚ್ಚಾಟದ ಫಲವಾಗಿ ಇಂದು ರಾಜ್ಯದ ಮಾನ, ಮರ್ಯಾದೆ ಹರಾಜಾಗುತ್ತಿದೆ.ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳಲು ಹಿಂಜರಿಯುವಂತಾಗಿದೆ.ಅಧಿಕಾರವನ್ನು ಭದ್ರ ಪಡಿಸಿಕೊಳ್ಳಲು,ಇಲ್ಲವೇ ಅಧಿಕಾರದ ಆಸೆ ಇಂತಹ ಹೀನ ಕೃತ್ಯಗಳಿಗೆ ಇಳಿದಿರುವುದು ಖಂಡನೀಯ.ಕೂಡಲೇ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇದರ ಜೊತೆಗೆ ಸ್ವೀಕರ್ ಅವರು ಈ ವಿಚಾರವನ್ನು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ 18ಜನ ಬಿಜೆಪಿ ಶಾಸಕ ಆರು ತಿಂಗಳ ಅಮಾನತ್ತು ಆದೇಶವನ್ನು ಮರುಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದರು.
ಅಧಿವೇಶನದ ಕೊನೆಯ ದಿನ ಸಚಿವರೊಬ್ಬರ ಮೇಲಾದ ಹನಿಟ್ರಾಪ್ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದ ವೇಳೆ ನಮ್ಮ ಪಕ್ಷದ ನಾಯಕರ ತೀರ್ಮಾನದಂತೆ ಸ್ವೀಕರ್ ಮುಂದೆ ನಮ್ಮ ಮನವಿಯನ್ನು ಸಲ್ಲಿಸಲು ಮುಂದಾಗಿದ್ದು ಸರಿಯಷ್ಟೇ. ಸ್ವೀಕರ್ ಸ್ಥಾನದ ಮೇಲೆ ಬಿಜೆಪಿಗೆ ಅತ್ಯಂತ ಗೌರವವಿದೆ.ಹಾಗಾಗಿ ಜನಪ್ರತಿನಿಧಿಗಳಾಗಿ ನಮ್ಮ ಅಹವಾಲು ಸಲ್ಲಿಸಲು ಮುಂದಾಗಿದ್ದೇವು.ಇದನ್ನೆ ನೇಪ ಮಾಡಿಕೊಂಡು ಸ್ವೀಕರ್ ನಡೆದುಕೊಂಡ ರೀತಿ ಸರಿಯಲ್ಲ. ಕೂಡಲೇ ಅವರು ತಮ್ಮ ಆದೇಶವನ್ನು ಮರುಪರಿಶೀಲನೆ ಮಾಡಬೇಕು. ಸ್ವೀಕರ್ ಪಕ್ಷ ಭೇಧ ಮರೆತು ಕೆಲಸ ಮಾಡಬೇಕಂದು ಸುರೇಶಗೌಡ ಅವರು ಆಗ್ರಹಿಸಿದರು.
ಕಾಂಗ್ರೆಸ್ನಲ್ಲಿ ಮೂಲ ಮತ್ತು ವಲಸಿಗ ಎಂಬ ಬಣಗಳು ಹುಟ್ಟಿಕೊಂಡಿವೆ.ಸುಮಾರು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ತಳದಿಂದ ಪಕ್ಷ ಕಟ್ಟಿದವರಿಗೆ ಅಧಿಕಾರ ಇಲ್ಲದಂತಾಗಿದೆ.2006ರಲ್ಲಿ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.ಇದೇ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದ, ಹೈಕಮಾಂಡ್ ಆದೇಶವನ್ನು ದಿಕ್ಕರಿಸಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬ ಒತ್ತಾಯ ಮಾಡುತಿದ್ದ ಸಹಕಾರ ಸಚಿವರಿಗೆ ಹನಿಟ್ರಾಫ್ ಹಗರಣ ಮೆತ್ತಿಕೊಂಡಿದೆ.ಅವರ ಬೆಂಬಲಕ್ಕೆ ಮುಖ್ಯಮಂತ್ರಿಗಳು ಧಾವಿಸಿಲ್ಲ. ಕೆ.ಎನ್.ರಾಜಣ್ಣ ಅವರೇ ಸದನದಲ್ಲಿ ಹೇಳಿರುವಂತೆ 48 ಜನ ಎಂ.ಎಲ್.ಎಗಳ ಸಿಡಿ ಇವೆ.ಹಾಗಾಗಿ ಈ ಹಗರಣವನ್ನು ಸಿಬಿಐಗೆ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂಬುದು ಬಿಜೆಪಿ ಪಕ್ಷದ ಒತ್ತಾಯವಾಗಿದೆ.ಸಿಒಡಿ, ಲೋಕಾಯುಕ್ತ, ಎಸ್.ಐ.ಟಿ. ತನಿಖೆಯಿಂದ ನ್ಯಾಯ ದೊರೆಯುವ ನಿರೀಕ್ಷೆ ಇಲ್ಲ.ಇದುವರೆಗೂ ಆಡಳಿತ ಮಾಡಿರುವ ಎಲ್ಲಾ ಸರಕಾರದ ಅವಧಿಯಲ್ಲಿ ಯೂ ನಡೆದಿರುವ ತನಿಖೆಗಳು ಸರಕಾರದ ಪರವಾಗಿ ಇರುವುದನ್ನು ಕಾಣಬಹುದಾಗಿದೆ ಎಂದರು.
ಶಾಸಕ ಜೋತಿಗಣೇಶ್ ಮಾತನಾಡಿ, ಸಿದ್ದಿವಿನಾಯಕ ಮಾರುಕಟ್ಟೆಗೆ ಸಂಬಂಧಿಸಿದಂತೆ ನನ್ನ ಮೇಲೆ ಆರೋಪ ಮಾಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಲ್ಲ. 2028ರ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಹೊರಟಿರುವ ಗುಂಪಿನ ಸದಸ್ಯ. ನಾನು ಕುರ್ಚಿಗೆ ಅಂಟಿ ಕೂತವನಲ್ಲ.2013-2018-2023 ಮೂರು ಸಂದರ್ಭಗಳಲ್ಲಿ ಬಿಜೆಪಿ ಪಕ್ಷದ ಮುಖಂಡರೇ ನನ್ನ ವಿರುದ್ದ ಕೆಲಸ ಮಾಡಿದ್ದರು.ಈಗಲೂ ನನ್ನ ವಿರುದ್ದ ಗುಂಪು 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಇಂತಹ ಆರೋಪ ಮಾಡುತ್ತಿದೆ.ಇಂತಹ ಇಲ್ಲಸಲ್ಲದ ಆರೋಪಗಳನ್ನು ನಿರ್ಲಕ್ಷ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೂಳೂರು ಶಿವಕುಮಾರ್, ಸಿದ್ದೇಗೌಡ,ವಿಜಯಕುಮಾರ್, ಬಿಜೆಪಿ ಮಹಿಳಾ ಘಟಕ ಮುಖಂಡರು, ಎಸ್ಸಿ ಘಟಕ ಅಧ್ಯಕ್ಷ ಅಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು.