ತುಮಕೂರು

ಜೈನ,ಕ್ರೈಸ್ತ,ಮುಸ್ಲಿಂ ಧರ್ಮಗಳಂತೆ ವೀರಶೈವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಸಮಾವೇಶದಲ್ಲಿ ನಿರ್ಣಯ : ಡಾ.ಶಾಮನೂರು ಶಿವಶಂಕರಪ್ಪ

ತುಮಕೂರು : ಕೇಂದ್ರ ಸರಕಾರ ವೀರಶೈವ ಲಿಂಗಾಯಿತ ಧರ್ಮವನ್ನು ಜೈನ,ಕ್ರೈಸ್ತ,ಮುಸ್ಲಿಂ ಧರ್ಮಗಳಂತೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಮಾವೇಶದ ನಿರ್ಣಯ ಕೈಗೊಳ್ಳಲಾಯಿತು.
ಸಮಾವೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ ಅವರು ಮಂಡಿಸಿದ ವೀರಶೈವ ಲಿಂಗಾಯಿತರು ನಾವೆಲ್ಲರೂ ಒಂದೆ,ವೀರಶೈವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಎಲ್ಲಾ ಪಂಗಡಗಳನ್ನು ಸೇರಿಸಬೇಕೆಂಬ ಮೂರು ನಿರ್ಣಯಗಳನ್ನು ಮಂಡಿಸಿದ್ದು,ಇದಕ್ಕೆ ವೇದಿಕೆ ಮೇಲಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ,ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ,ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾದ ಡಾ.ಎನ್.ತಿಪ್ಪಣ್ಣ ಸೇರಿದಂತೆ ಎಲ್ಲರೂ ಒಕ್ಕೊರಲಿನ ಅನುಮೋಧನೆ ಸೂಚಿಸಿದರು.
ಎರಡು ದಿನಗಳ ವೀರಶೈವ ಲಿಂಗಾಯಿತ ಮಹಾಸಭಾದ ಯುವ ಮತ್ತು ಮಹಿಳಾ ಕಾರ್ಯಾಗಾರ ಹಾಗೂ ಸಮಾವೇಶದ ಸಮಾರೋಪ ಭಾಷಣ ಮಾಡಿದ ಡಾ.ಶಾಮನೂರು ಶಿವಶಂಕರಪ್ಪ, ಇಂದು ಎಲ್ಲಾ ಸಮಾಜಗಳ ಜನರು ತಮ್ಮ ಮಕ್ಕಳನ್ನು ಉನ್ನತ ಹುದ್ದೆಗಳಲ್ಲಿ ಕಾಣಲು ಬಯಸುತಿದ್ದಾರೆ.ಹಾಗಾಗಿ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ.ಇದರ ಭಾಗವೇ ಪ್ರತಿಭಾ ಪುರಸ್ಕಾರ.ಈ ಕಾರ್ಯಕ್ಕಾಗಿಯೇ ವೀರಶೈವ ಲಿಂಗಾಯಿತ ಮಹಾಸಭಾವೂ ಒಂದು ಕೋಟಿ ರೂಗಳನ್ನು ಮೀಸಲಿರಿಸಿದೆ.ಇದರ ಜೊತೆಗೆ ಮಹಿಳಾ ಶಕ್ತಿಯ ಪ್ರದರ್ಶನವೂ ಇಲ್ಲಿ ನಡೆದಿದೆ.ಕಿತ್ತೂರು ರಾಣಿ ಚನ್ನಮ್ಮ,ಒನಕೆ ಓಬವ್ವ ಅವರುಗಳನ್ನು ಇಂದು ಜನತೆ ಸ್ಮರಿಸಲು ಅವರು ತೋರಿದ ಧೈರ್ಯ, ಸಾಹಸಗಳೇ ಕಾರಣ.ಇಂದು ಎಲ್ಲಾ ರಂಗದಲ್ಲಿಯೂ ಮಹಿಳೆಯರಿದ್ದಾರೆ. ಬಹಳ ಪ್ರಾಮಾಣಿಕತೆಯಿಂದ ಕಾರ್ಯನಿರ್ವ ಹಿಸುತಿದ್ದಾರೆ.ಹಾಗೆಯೇ ಯುವಶಕ್ತಿ ದೇಶದ ಸಂಪತ್ತು. ಇಂತಹ ಯುವಕರನ್ನು ಸಶಕ್ತಗೊಳಿಸಲು ಹೆಚ್ಚು ಒತ್ತು ನೀಡುವ ಅಗತ್ಯವಿದೆ.ಮುಂದಿನ ದಿನಗಳಲ್ಲಿ ಮಹಾಸಭಾ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ ಮಾತನಾಡಿ,ತ್ಯಾಗದಿಂದ ಮಾತ್ರ ಎಲ್ಲವೂ ಸೌಖ್ಯ ಎಂಬುದು ವೀರಶೈವ ಲಿಂಗಾಯಿತ ಧರ್ಮದ ಸಾರ.ಸಾಕ್ಷತ್ ಶಿವನ ಸ್ವರೂಪವೇ ನಾವಾಗಿ, ಇತರರಲ್ಲಿಯೂ ಪರಶಿವನನ್ನು ಕಾಣುವುದೇ ನಮ್ಮ ಧರ್ಮದ ಮೂಲ ಉದ್ದೇಶ.ಆದರೆ ಇಂದು ನಾವು ಆ ರೀತಿ ಬದುಕುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.ನಡೆದಾಡುವ ದೇವರೆಂದು ಕರೆಯಿಸಿಕೊಂಡು ಡಾ.ಶ್ರೀಶಿವಕುಮಾರಸ್ವಾಮೀಜಿಯವರಿಗೆ ನಾವೆಲ್ಲರೂ ಗೌರವ ಕೊಡುವುದೇ ಆದರೆ ಅವರಂತೆ ಸರಳ, ಸಹಜ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದು ಕಿವಿ ಮಾತು ಹೇಳಿದರು
ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ,ಇಂದು ಮಂಡಿಸಿರುವ ಎಲ್ಲಾ ನಿರ್ಣಯಗಳು ಈ ಮಹಾಸಭಾವನ್ನು ಸ್ಥಾಪಿಸಿ,ಸಮಾಜದಲ್ಲಿ ಐಕ್ಯತೆ ಮತ್ತು ಅಭಿವೃದ್ದಿಯ ಕನಸು ಕಂಡಿದ್ದ ಹಾನಗಲ್ ಕುಮಾರಸ್ವಾಮೀ ಅವರ ಆಶಯವಾಗಿತ್ತು.ಕಳೆದ ನೂರು ವರ್ಷಗಳಿಂದ ಅವರ ಕನಸನ್ನು ನನಸು ಮಾಡಲು ಮಹಾಸಭಾ ಇಂದಿಗೂ ಪ್ರಯತ್ನಿ ಸುತ್ತಲೇ ಇದೆ.2ಎ ಮತ್ತಿತರರ ಸವಲತ್ತು ಕೇಳುತ್ತಿರುವ ನಾವುಗಳು,ಮೊದಲು ಶರಣಧರ್ಮವನ್ನು ಅನುಸರಿಸು ತ್ತಿದ್ದೇವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ. ನಮ್ಮದನ್ನು ಉಳಿಸಿಕೊಂಡು,ಮತ್ತೊಬ್ಬರದನ್ನು ಕೇಳೋಣ.ಮಕ್ಕಳಲ್ಲಿ ಧರ್ಮ ಸಂಸ್ಕಾರವನ್ನು ತುಂಬುವ ಮೂಲಕ ಅವರನ್ನು ಲಿಂಗಾಯಿತ, ವೀರಶೈವ ಧರ್ಮವನ್ನು ಮುಂದಿನ ಪೀಳಿಗೆಯವರು ಉಜ್ವಲಗೊಳಿಸುವಂತೆ ಪ್ರೇರೆಪಿಸೊಣ ಎಂದರು.
ಕಾರ್ಯಕ್ರಮದಲ್ಲಿ ಡಾ.ಎನ್.ತಿಪ್ಪಣ್ಣ, ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಮಾವೇಶ ಮತ್ತು ಕಾರ್ಯಾಗಾರದ ಯಶಸ್ವಿಗೆ ದುಡಿದ ಹಲವನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಎಸ್.ಐ.ಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಎಸ್.ಕೆ.ರಾಜಶೇಖರ್,ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ರಾಜ್ಯ ಯುವಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಭ ಬಸವರಾಜು, ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker