ಜಿಲ್ಲೆತುಮಕೂರುಸುದ್ದಿ
Trending

ಡಾ.ಜಿ.ಪರಮೇಶ್ವರ್ ಯುವ ಸೇನೆಯಿಂದ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ : ರಾಜ್ಯಾಧ್ಯಕ್ಷ ನಗುತ ರಂಗನಾಥ್

ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ಪೂರ್ವಭಾವಿ ಸಭೆ

ತುಮಕೂರು:ಮಾಜಿ ಮುಖ್ಯಮಂತ್ರಿಗಳು,ಶಿಕ್ಷಣ ತಜ್ಞರೂ ಆಗಿರುವ ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ಸ್ಥಾಪನೆ ಯಾಗಿರುವ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೇನೆಯ ಮೂಲಕ ಸಾರ್ವಜನಿಕರ ಸಮಸ್ಯೆಗಳ ವಿರುದ್ದ ಹೋರಾಟ ನಡೆಸುವ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ನಗುತ ರಂಗನಾಥ್ ತಿಳಿಸಿದ್ದಾರೆ.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಆತೀಕ್ ಅಹಮದ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ನಡೆಸುವ ನಿಟ್ಟಿನಲ್ಲಿ ಸಂಘದ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿಭಟನೆ,ಧರಣಿಯಂತಹ ಕಾರ್ಯಕ್ರಮಗಳ ಮೂಲಕ ಡಾ.ಜಿ.ಪರಮೇಶ್ವರ್ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಸಜ್ಜನ ರಾಜಕಾರಣಿಯಾಗಿ,ಉನ್ನತ ಶಿಕ್ಷಣ ಸಚಿವರಾಗಿ,ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಡಾ.ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಗಳಾಗಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬುದು ಸಂಘಟನೆಯ ಆಶಯ ವಾಗಿದೆ.ಈ ನಿಟ್ಟಿನಲ್ಲಿ ಇಡೀ ರಾಜ್ಯದಾದ್ಯಂತ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಪದಾಧಿಕಾರಿಗಳು ಮುಂದಾಗಬೇಕಿದೆ.ಅದರಲ್ಲಿಯೂ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಂಘ ಮತ್ತಷ್ಟು ಬಲಿಷ್ಠವಾಗ ಬೇಕಾಗಿದೆ ಎಂದರು.
ನಾಲ್ಕುಬಾರಿ ಶಾಸಕರಾಗಿ,ಎರಡು ಬಾರಿ ಸಚಿವರಾಗಿ,ಒಮ್ಮೆ ಉಪಮುಖ್ಯಮಂತ್ರಿಯಾಗಿ,8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಡಾ.ಜಿ.ಪರಮೇಶ್ವರ್ ಒರ್ವ ಸಜ್ಜನ ರಾಜಕಾರಣಿ,ವಿದೇಶದಲ್ಲಿ ಓದಿ,ತಾವುಗಳಿಸಿದ ಜ್ಞಾನವನ್ನು ರಾಜ್ಯದ ಅಭಿವೃದ್ದಿಗೆ ಬಳಕೆ ಮಾಡುತ್ತಿದ್ದಾರೆ.ಇಂತಹ ದೂರದೃಷ್ಟಿ ಹೊಂದಿರುವ ರಾಜಕಾರಣಿಯ ಕೈಬಲ ಪಡಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯವನ್ನು ಹಿಂದುಳಿದ ವರ್ಗಗಳ,ದಲಿತ, ಅಲ್ಪಸಂಖ್ಯಾತ ಯುವಕರು ಸೇರುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕೆಂದು ನಗುತ ರಂಗನಾಥ್ ಮನವಿ ಮಾಡಿದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ರಾಜ್ಯ ಗೌರವಾಧ್ಯಕ್ಷ ಆತೀಕ್ ಅಹಮದ್ ಮಾತನಾಡಿ,ಈಗಾಗಲೇ ಸಂಘಟನೆ 17 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದು,ಇತ್ತೀಚಗೆ ದಾವಣಗೆರೆಯಲ್ಲಿ 17 ಜಿಲ್ಲೆಗಳ ಸುಮಾರು 150ಕ್ಕು ಹೆಚ್ಚು ಪದಾಧಿಕಾರಿಗಳಿಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ.ಅದೇ ರೀತಿ ತುಮಕೂರು ಜಿಲ್ಲೆಯಲ್ಲಿಯೂ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ.ಇದರ ಹಿನ್ನೆಲೆಯಲ್ಲಿ ಇಂದು ಸಭೆ ಕರೆದು ಚರ್ಚೆ ನಡೆಸಲಾಗುತ್ತಿದೆ.ಚಿಕ್ಕಹಳ್ಳಿಯ ರೈತಮಹಿಳೆಯ ಮೇಲೆ ನಡೆದಿರುವ ಅತ್ಯಾಚಾರ, ಕೊಲೆಯನ್ನು ಖಂಡಿಸಿ,ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ,ಸೆಪ್ಟಂಬರ್ 06ರ ಸೋಮವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ,ಮೈಸೂರು ಜಿಲ್ಲಾಧ್ಯಕ್ಷ ಮಂಜುನಾಥ್, ಕುಣಿಗಲ್ ತಾಲೂಕು ಅಧ್ಯಕ್ಷ ವರದರಾಜು, ಉಪಾಧ್ಯಕ್ಷ ಜಬಿವುಲ್ಲಾ,ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾಜಿ,ಹೆಬ್ಬೂರು ಹೋಬಳಿ ಅಧ್ಯಕ್ಷ ಚೇತನ್, ಗಿರಿಸ್ವಾಮಿ, ಸಾಗರ್, ಆಶೋಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker