
ಚಿ.ನಾ.ಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಲಗೊಂಡನಹಳ್ಳಿ ಕೆರೆ ಅಂಗಳದ ಕುರುಚಲ ಗಿಡದಲ್ಲಿ 3 ಚಿರತೆಗಳು ಸೇರಿಕೊಂಡಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿಯೇ ಕುರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಇದರಿಂದ ಈ ಭಾಗದ ಜನ ಭಯಭೀತರಾಗಿದ್ದಾರೆ.
ಮಲಗೊಂಡನಹಳ್ಳಿ ಕೆರೆಯಲ್ಲಿ ಹೆಚ್ಚು ಕುರುಚಲ ಗಿಡಗಳು ಬೆಳೆದಿದ್ದು, ಕಾಡು ಪ್ರಾಣಿಗಳ ವಾಸಸ್ಥಾನವಾಗಿದೆ. ಚಿರತೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಇಲ್ಲಿನ ಜನರು ರಾತ್ರಿ ವೇಳೆಯಲ್ಲಿ ತೋಟಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ನಿತ್ಯ ಒಂದಿಲ್ಲೊAದು ಕುರಿಗಳ ಮೇಲೆ ದಾಳಿ ಮಾಡಿ ಕುರಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿವೆ. ಈಗಾಗಲೇ 10 ರಿಂದ 15 ಕುರಿಗಳನ್ನು ತಿಂದಿರುವ ಚಿರತೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಭೀತಿ ಇದೆ.ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಮುಖಾಂತರ ತಿಳಿಸಿದರೆ ಕುಪ್ಪೂರಿನಲ್ಲಿ ಕಬ್ಬಿಣದ ಬೋನು ಇದೆ ನೀವೇ ಬಂದು ತೆಗೆದುಕೊಂಡು ಹೋಗಿ ಎಂದು ಉತ್ತರಿಸುತ್ತಾರೆ, ಇದಕ್ಕೆ ತಗಲುವ ಖರ್ಚು ಯಾರು ಕೊಡುತ್ತಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.