ಗುಬ್ಬಿ : ತಲ್ವಾರ್ ಎಂಬ ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಗುಬ್ಬಿ ತಾಲ್ಲೂಕಿನಾದ್ಯಂತ ಎಲ್ಲೆಡೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗುಬ್ಬಿ ಪಟ್ಟಣದಲ್ಲಿ ಕೆಲ ಮುಸ್ಲಿಂ ಸಮುದಾಯದ ಯುವಕರು ನಡುರಸ್ತೆಯಲ್ಲಿ ತಲ್ವಾರ್ ಹಿಡಿದು ಸ್ನೇಹಿತರೊಂದಿಗೆ ತನ್ನ ಹುಟ್ಟು ಹಬ್ಬವನ್ನು ತಲ್ವಾರ್ ಎಂಬ ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡು ಅಟ್ಟಹಾಸ ಮೆರೆದಿದ್ದು ಪಟ್ಟಣದ ಜನತೆಯನ್ನು ಭಯ ಭೀತರನ್ನಾಗಿ ಮಾಡಿದೆ.
ತುಮಕೂರು ಜಿಲ್ಲೆಯಲ್ಲಿ ಡ್ರಗ್ಸ್ ಮತ್ತು ಗಾಂಜಾ ಗಿರಾಕಿಗಳಿಂದ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ ಗುಬ್ಬಿ ಪಟ್ಟಣದಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಯುವಕನೊಬ್ಬ ರೌಡಿಯ ರೀತಿ ತಲ್ವಾರ್ ಹಿಡಿದು ಬಾಸ್ ಎಂಬ ಕೇಕ್ ಕತ್ತರಿಸುವ ಮೂಲಕ ದೃಶ್ಯವನ್ನು ವಿಡಿಯೋ ಮಾಡಿ ಆತನ ಸ್ನೇಹಿತರು ತಮ್ಮ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಭಯದ ವಾತಾವರಣ ಸೃಷ್ಟಿಸಿರುವುದು ಮತ್ತೊಂದೆಡೆಯಾಗಿದೆ.
ಗುಬ್ಬಿಯಲ್ಲಿ ಎಂದೂ ಕೂಡ ಈ ಮಟ್ಟದ ಹುಟ್ಟುಹಬ್ಬ ಆಚರಣೆ ಮಾಡಿದ್ದು ಕಂಡಿಲ್ಲ ಎನ್ನುವ ಅಲ್ಪ ಸಂಖ್ಯಾತರ ಸಮುದಾಯದ ಅವರದ್ದೇ ಜನ ಈ ಆಚರಣೆ ಬಗ್ಗೆ ತೀವ್ರವಾಗಿ ಖಂಡಿಸುತ್ತಿದ್ದಾರೆ. ಸಮುದಾಯದ ಯುವಕರು ಒಗ್ಗೂಡಿ ಬಾಸ್ ಎಂಬ ಅಕ್ಷರದ ಕೇಕ್ ಕತ್ತರಿಸಲು ತಲ್ವಾರ್ ಬಳಸಿದ ಬಗ್ಗೆ ಪೊಲೀಸರು ಜಾಣ ಮೌನ ತಾಳಿದ್ದಾರೆ. ವಿಷಯ ತಿಳಿದು ಯುವಕರ ವಿಚಾರಣೆ ಮಾಡಿ ಹಾಗೇ ಮರಳಿ ಕಳುಹಿಸಿದ ಬಗ್ಗೆ ಮುಸ್ಲೀಂ ಬಾಂಧವರಿಂದ ತೀವ್ರ ಆಕ್ಷೇಪ ಕೇಳಿ ಬಂದಿದೆ.
ಮಾರ್ಕೆಟ್ ರಸ್ತೆಯಲ್ಲಿ ಶಾರುಖ್ ಹಾಗೂ ಮುಗಲ್ ಪಾಷ ಎಂಬ ಯುವ ಮುಖಂಡರ ಜನುಮ ದಿನ ಆಚರಣೆಯನ್ನು ಮಾಡಿದ್ದು ಈ ಪೈಕಿ ಓರ್ವ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಅವರದ್ದೇ ಸಮುದಾಯದ ಹಲವರು ಖಂಡಿಸಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದ್ದ ಪೊಲೀಸರು ಕೇವಲ ವಿಚಾರಣೆ ನಡೆಸಿ ಕೆಲ ಪ್ರಭಾವಿಗಳ ಮಾತಿಗೆ ಕಟ್ಟುಬಿದ್ದು ಯುವಕರನ್ನು ಬಿಟ್ಟು ಕಳುಹಿಸಿರುವ ಮಾಹಿತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆತಂಕ ಮೂಡಿಸಿದ ಈ ಘಟನೆ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸದಿದ್ದರೆ ಇಂತಹ ಕೃತ್ಯಗಳು ಮುಂದುವರಿದರೆ ಮುಂದಿನ ಕೆಲವು ಅಚಾತುರ್ಯಗಳಿಗೆ ಯಾರು ಹೊಣೆ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ. ಗುಬ್ಬಿ ಪಟ್ಟಣದಲ್ಲಿ ಎಂದೂ ಕಂಡರಿಯದ ಈ ಘಟನೆ ನಾಗರೀಕರನ್ನು ಬೆಚ್ಚಿಬೀಳಿಸಿದ್ದು ಹುಟ್ಟು ಹಬ್ಬವನ್ನೇ ಆಚರಣೆ ಮಾಡದ ಸಮುದಾಯ ಈ ಮಟ್ಟದ ಮಾರಕಾಸ್ತ್ರ ತಲ್ವಾರ್ ಮೂಲಕ ಕೇಕ್ ಕತ್ತರಿಸಿದ್ದು ಪೊಲೀಸ್ ಇಲಾಖೆ ಜಾಣ ಕುರುಡು ಪ್ರದರ್ಶನ ಮಾಡಿದೆ ಎನ್ನುವ ಚರ್ಚೆ ಸಾರ್ವಜನಿಕರ ಮಧ್ಯೆ ನಡೆದಿದೆ.