ಜಿಲ್ಲೆತುಮಕೂರು

ವಸ್ತು ಪ್ರದರ್ಶನಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ಆಕರ್ಷಣೆಯ ಕೇಂದ್ರಗಳಾಗಬೇಕು : ಸಿಇಓ ಜಿ.ಪ್ರಭು

ತುಮಕೂರು : ತ್ರಿವಿಧ ದಾಸೋಹ ಕ್ಷೇತ್ರ ಶ್ರೀ ಸಿದ್ಧಗಂಗೆಯಲ್ಲಿ ಈ ಬಾರಿ ನಡೆಯಲಿರುವ ವಸ್ತು ಪ್ರದರ್ಶನ ಮೇಳಗಳು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡುವ ಆಕರ್ಷಣೆಯ ಕೇಂದ್ರಗಳಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.

ಶ್ರೀ ಸಿದ್ಧಗಂಗಾ ಮಠದಲ್ಲಿ ಬುಧವಾರ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ 2024 ರ ಫೆ 26 ರಿಂದ ಮಾ 11 ರವರೆಗೆ 15 ದಿವಸಗಳು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದ್ದು, ಸರ್ಕಾರದ ವಿವಿಧ ಯೋಜನೆಗಳಡಿ ನೀಡುವಂತಹ ಸವಲತ್ತುಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಿದಾಗ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಗಳು ರೈತ ಮತ್ತು ಜನಸಾಮಾನ್ಯರಲ್ಲಿ ಬದಲಾವಣೆ ತರಲಿವೆ ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿ ಪ್ರಾತ್ಯಕ್ಷಿಕೆಯ ಮೂಲಕ ತಮ್ಮ ಇಲಾಖೆಗ ಸಂಬಂಧಿಸಿದ ಜನಪರ ಮಾಹಿತಿಯನ್ನು ವಸ್ತು ಪ್ರದರ್ಶನದಲ್ಲಿ ಆನಾವರಣಗೊಳಿಸಬೇಕು.

ತೆಂಗಿನ ಉತ್ಪನ್ನಗಳಿಂದ ತಯಾರಿಸಿದ ಮಾದರಿಗಳು, ಗಣಿತ, ವಿಜ್ಞಾನ, ಕ್ರೀಡೆಗಳಿಗೆ ಸಂಬಂಧಿಸಿದ ವಿನ್ಯಾಸಗಳು, ಕರಕುಶಲ ವಸ್ತುಗಳು, ಹಾಗೂ ಪ್ಲಾಸ್ಟಿಕ್ ತ್ರಾಜ್ಯಗಳಿಂದ ಜಗತ್ತಿನಲ್ಲಿನ ಜೀವಿಗಳು ಅನುಭವಿಸುತ್ತಿರುವ ಕಷ್ಟಗಳು ಸೇರಿದಂತೆ ನಿಯಂತ್ರಣಕ್ಕೆ ಅನುಸರಿಸಬೇಕಾದ ನಿಯಮಗಳು, ಧೂಮಪಾನ ದಿಂದಾಗುವ ದುಷ್ಟಪರಿಣಾಮಗಳ ಪ್ರದರ್ಶನವಿರಬೇಕು, ಕೈಮಗ್ಗ, ಕಲಾಕೃತಿಗಳು, ಕರಕುಶಲ ವಸ್ತುಗಳು ಮತ್ತು ದೇಶೀಯ ವಸ್ತುಗಳ ಪ್ರದರ್ಶನವು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಬೇಕು, ಯಶಸ್ವಿ ಕೈಗಾರಿಕೋದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು, ಕೃಷಿ ಮೇಳದಲ್ಲಿ ಕೃಷಿ ಕ್ಷೇತ್ರದ ತಾಂತ್ರಿಕತೆ, ಆಧುನಿಕತೆ, ವೈವಿಧ್ಯಮಯ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸಮಗ್ರ ಬೆಳೆ ನಿರ್ವಹಣೆ, ಕೃಷಿ ಉಪಕರಣಗಳು, ರಾಗಿ ಮತ್ತು ಬೇಳೆಕಾಳುಗಳ ಪ್ರದರ್ಶನ, ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಹಾಗೂ ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಲಾಭ ನೀಡುವಂತಹ ತಂತ್ರಜ್ಞಾನ ಆಧಾರಿತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಅನ್ನದಾತರಿಗೆ ಮಾಹಿತಿ ನೀಡಬೇಕು, ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ವತಿಯಿಂದ ಸ್ಥಳೀಯ ತಳಿಯ ಜಾನುವಾರು, ಕುರಿ, ಕೋಳಿ ಮತ್ತು ಮೇಕೆಗಳ ಪ್ರದರ್ಶನ ಮೇಳದ ಭಾಗವಾಗಿಸಿ, ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರೆಯಲ್ಲಿ ಎತ್ತುಗಳ ಪರಿಷೆ ವಿಶೇಷವಾಗಿದ್ದು ಅಗತ್ತಯ ಮುನ್ನೆಚರಿಕೆ ವಹಿಸಬೇಕು, ಕ್ರೀಡೆಗಳನ್ನು ಉತ್ತೇಜಿಸಲು ವಸ್ತು ಪ್ರದರ್ಶನ ದಲ್ಲಿ ಕ್ರೀಡಾ ಪರಿಕರಗಳು, ಜಿಲ್ಲೆಯ ಕ್ರೀಡಾಂಗಣಗಳ ಮಾಹಿತಿ, ಸರ್ಕಾರದ ಸೌಲಭ್ಯಗಳ ಒಳಗೊಂಡ ವಸ್ತು ಪ್ರದರ್ಶನ ಏರ್ಪಡಿಸಬೇಕು, ಅರಣ್ಯ ಇಲಾಖೆ ವತಿಯಿಂದ ಇರುವಂತಹ ಎಲ್ಲಾ ಸಸ್ಯವರ್ಗಗಳ ಪ್ರದರ್ಶನ ವಿರಬೇಕು ಎಂದರು.

ರೈತ ಮಳೆಯಿಲ್ಲದೆ ಕಂಗಾಲಾಗಿದ್ದು ಕೃಷಿಯ ನೂತನ ಆವಿಷ್ಕಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೆಲಸ ಮಾಡಬೇಕು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳ ಆನಾವರಣಕ್ಕೆ ವಸ್ತು ಪ್ರದರ್ಶನಗಳು ಸಹಕಾರಿಯಾಗಿದೆ ಇಂತಹ ಪ್ರಧರ್ಶನಗಳಲ್ಲಿ ವಿದ್ಯಾರ್ಥಿಗಳು ಬಾಲವಿಜ್ಞಾನಿಗಳಾಗಿ ಹೊರ ಹೊಮ್ಮಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು, ಲಕ್ಷಾಂತರ ಸಾರ್ವಜನಿಕರು ವಸ್ತು ಪ್ರದರ್ಶನದ ವೀಕ್ಷಣೆಯಲ್ಲಿ ಪಾಲ್ಗೊಳ್ಳುತ್ತಾರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ವಹಿಸಬೇಕು, ಸುಗಮ ಸಂಚಾರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿವಿಧ ತಾಲ್ಲೂಕುಗಳು ಮತ್ತು ಜಿಲ್ಲಾ ಕೇಂದ್ರಗಳಿಂದ ವಿಶೇಷ ಬಸ್‌ಗಳನ್ನು ಸೂಕ್ತವಾಗಿ ನಿರ್ವಹಿಸಬೇಕು, ಜಾತ್ರೆಯ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಮನರಂಜನೆ ಒದಗಿಸುವ ಸಲುವಾಗಿ ವಸ್ತುಪ್ರದರ್ಶನವನ್ನು ಆರ್ಕಷಿಣಿಯವಾಗಿಸಿ ಮೇಳದ ಯಶಸ್ಸಿಗೆ ವಿವಿಧ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಬೇಕು, ಇದಕ್ಕಾಗಿ ಬೇಕಾದ ಎಲ್ಲಾ ಅಗತ್ಯ ಪೂರ್ವ ಸಿದ್ದತೆ ಮಾಡಿಕೊಂಡು, ಉದ್ಘಾಟನೆ ಸಮಯಕ್ಕೆ ಅನುಗುಣವಾಗಿ ಎಲ್ಲಾ ಮಳಿಗೆಗಳು ಭರ್ತಿಯಾಗಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಬೇಕು. ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ವಸ್ತು ಪ್ರದರ್ಶನವನ್ನು ಯಶಸ್ವಿಗೊಳಿಸಿ ಸರ್ಕಾರದ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪರಿಣಾಮಕಾರಿಯಾದ ಸಂದೇಶವನ್ನು ಸಮಾಜಕ್ಕೆ ನೀಡಿ ವಸ್ತು ಪ್ರದರ್ಶನದ ನೈಜ ಉದ್ದೇಶ ಸಕಾರ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದರು.

ವಸ್ತು ಪ್ರದರ್ಶನದಲ್ಲಿ ತಮ್ಮ ಇಲಾಖೆಗಳಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಡಿಡಿಪಿಐ ರಂಗಧಾಮಯ್ಯ, ಕೃಷಿ ಇಲಾಖೆಯ ಉಪ ನಿರ್ದೇಶಕ ಅಶೋಕ್ ಟಿ.ಎನ್ , ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಸುಮಲತ .ಡಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಬಿ.ವಿ , ಗ್ರಾಮೀಣ ಕೈಗಾರಿಕೆ ಇಲಾಖೆ ಉಪನಿರ್ದೇಶಕಿ ಸುಮನ, ಆರೋಗ್ಯ ಇಲಾಖೆಯ ಎನ್.ಟಿ.ಚಂದ್ರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಸ್ವಾಗತಿಸಿದರು.

ಶ್ರೀ ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ, ಕೆ.ಬಿ ರೇಣುಕಯ್ಯ, ಕಾರ್ಯದರ್ಶಿ ಡಿ ಗಂಗಾಧರಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರವಿಕುಮಾರ್ ಎಂ.ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker