ಇತರೆರಾಜ್ಯ

ಹೆಣ್ಣು ಮಕ್ಕಳು ದನಿ ಎತ್ತಿ ದೌರ್ಜನ್ಯ ಖಂಡಿಸಬೇಕು : ಡಾ.ಶ್ವೇತಾ ಮಡಪ್ಪಾಡಿ

ಮೈಸೂರು : ದೇಶ ಮುಂದುವರೆಯುತ್ತಿದೆ. ತಂತ್ರಜ್ಞಾನ ಮುಂದುವರೆಯುತ್ತಿದೆ. ಹೆಣ್ಣುಮಕ್ಕಳು ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ. ಸ್ವಾವಲಂಬನೆಯದಾರಿಯನ್ನೂ ಕಂಡುಕೊಳ್ಳುತ್ತಿದ್ದಾರೆ. ಆದರೆ ಆಂತರ್ಯದಲ್ಲಿ ಹೆಣ್ಣು ಸದಾ ಒಂದು ಬಗೆಯ ಭಯಸ್ಥ ಸ್ಥಿತಿಯಲ್ಲೇ ಬದುಕುತ್ತಿದ್ದಾಳೆ ಎಂಬುದು ವಸ್ತುಸ್ಥಿತಿ ಎಂದು ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಹೆಣ್ಣುಮಕ್ಕಳ ಈ ಭಯಕ್ಕೆಕಾರಣ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಹಲವು ಬಗೆಯ ನಡೆಗಳು. ಹೆಣ್ಣಿನಮನಸ್ಸಿನ ಆತಂಕವನ್ನು ನರೇಟ್ ಮಾಡುವುದು ಸಾಧ್ಯವಿಲ್ಲ. ಕಾರಣ ಸ್ವತ: ಹೆಣ್ಣುಮಕ್ಕಳು ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಕುರಿತು ಮಾತನಾಡುವುದಕ್ಕೆ ಭಯಪಡುತ್ತಿದ್ದಾರೆ. ಹೆಣ್ಣು ಸ್ವತ: ತನ್ನ ತಾನು ಗಟ್ಟಿಗಳಿಸಿಕೊಳ್ಳದೇ ಹೋದಲ್ಲಿ ಯಾವ ಕಾನೂನು ಕೂಡ ನ್ಯಾಯ ಕೊಡಲಾರದು.

ನೇರವಾಗಿ ಮುರುಘಾ ಮಠದ ವಿಚಾರಕ್ಕೆ ಬಂದಾಗ ಇನ್ನು ಮುರುಘಾ ಶ್ರೀಗಳು ತಪ್ಪು ಮಾಡಿದ್ದಾರೋ ಬಿಟ್ಟಿದ್ದಾರೋ ಅದನ್ನು ಕಾನೂನು ನಿರ್ಧರಿಸಲಿ. ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಇಂಥ ಕೆಲಸ ಮಾಡಿದ್ದಾರೆಂದರೆ ಅದು ಖಂಡನಾರ್ಹ. ಇವರಿಗೆ ಮೊದಲನೆಯದಾಗಿ ಒಂದು ಆತ್ಮಸಾಕ್ಷಿ ಇರಬೇಕಿತ್ತು. ಕಾಮ ಅನ್ನೋದು ಮನುಷ್ಯನ ವೀಕ್‌ನೆಸ್‌ ಇರಬಹುದು. ಆದರೆ ಅದನ್ನು ಮೀರುತ್ತೇನೆ ಎಂದು ಪ್ರಮಾಣ ಮಾಡಿ ಮಠವನ್ನು ಪ್ರವೇಶಿಸಿದ ಸ್ವಾಮೀಜಿಯೊಬ್ಬಇಂಥ ಹೀನ ಕೆಲಸ ಮಾಡಬಲ್ಲನೆಂದರೆ ಅದು ಅಕ್ಷಮ್ಯ ಮತ್ತು ಅವರಿಗೆ ಸರಿಯಾದ ಶಿಕ್ಷೆಯಾಗಬೇಕಿದೆ. ಅದು ಮತ್ತೆ ಎಂದೂ ಯಾರೂ ಇಂಥ ಧೈರ್ಯ ಮಾಡಬಾರದು ಎಂಬಂಥ ಶಿಕ್ಷೆಯಾಗ ಬೇಕು ಎಂದರು.

ಶ್ರೀಗಳ ವಿರುದ್ಧದ ಆ ಪತ್ರ್ರಿಕಾ ಹೇಳಿಕೆ ಗಮನಿಸಿದರೆ ಸಂಕಟವಾಗುತ್ತದೆ. ಸ್ವತ: ವಾರ್ಡನ್‌ ರಾತ್ರಿಯ ವೇಳೆಗೆ ಹೆಣ್ಣು ಮಕ್ಕಳನ್ನು ಶ್ರೀಗಳ ಸೇವೆಗೆಂದು ಕಳುಹಿಸುತ್ತಿದ್ದಳು ಮತ್ತು ಅಲ್ಲಿ ಆ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತಿತ್ತು ಎಂಬುದು ಎಷ್ಟು ಆತಂಕಕಾರಿ! ನಮ್ಮ ಸಮಾಜ ಬದಲಾಗಿರುವುದಾದರೂ ಎಲ್ಲಿ?

ನಾವು ನಮ್ಮ ಮಕ್ಕಳನ್ನು ಮನೆಯ ಒಳಗೆ ಜೋಪಾನ ಮಾಡುತ್ತೇವೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ. ಅದೇ ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ಕಳುಹಿಸಲೇಬೇಕು. ಎಷ್ಟು ಜನ ಹಾಸ್ಟೇಲ್ ಗಳಲ್ಲಿ ಮಕ್ಕಳನ್ನು ಇಟ್ಟಿಲ್ಲ?ಎಷ್ಟು ಜನ ಮಠಗಳನ್ನು ಹುಡುಕಿ ಹೋಗಿ ಮಕ್ಕಳನ್ನು ಸೇರಿಸುವುದಿಲ್ಲ? ಇಂಥ ಘಟನೆಗಳಿಂದ ಮತ್ತೆ ಮತ್ತೆ ನಮ್ಮ ಹೆಣ್ಣು ಮಕ್ಕಳು ಇನ್ನೂ ಅಭದ್ರರು ಎಂಬುದು ಸಾಬೀತಾಗುತ್ತಿದೆ.

ನನ್ನ ಪ್ರಕಾರ ಹೆಣ್ಣಿನ ಮೇಲಾಗುವ ದೌರ್ಜನ್ಯಗಳು ಕ್ರೂರತೆಯ ಮುಖಕ್ಕಿಂತ ದಾಕ್ಷಿಣ್ಯದ ಮುಖವಾಡದೊಳಗೇ ಮುಚ್ಚಿ ಹೋಗಿರುತ್ತವೆ. ಹೆಣ್ಣು ಮಾನಸಿಕವಾಗಿ ಸೋಲುವುದೇ ಆಕೆಯ ಎಲ್ಲಾ ಆತಂಕಗಳಿಗೆ ಮುನ್ನುಡಿ.

ನನ್ನ ಪ್ರಕಾರ ನಿತ್ಯಜೀವನದಲ್ಲಿ ಸಮಾಜದ ಪ್ರತೀ ಐದುಜನರಲ್ಲಿ ಒಬ್ಬಳು ಹೆಣ್ಣುಮಗಳು ಒಂದಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾಳೆ. ಅದು ಅವಳ ಸ್ವಂತ ತಂದೆಯಿಂದಲೇ, ಸ್ವಂತ ಅಣ್ಣನಿಂದಲೇ, ಸ್ವಂತ ಗುರುವಿನಿಂದಲೇ, ಸ್ವಂತ ಮೇಲಾಧಿಕಾರಿಯಿಂzಲೇ, ಸಹಪಾಠಿಯಿಂzಲೇ, ಸ್ನೇಹಿತನಿಂzಲೇ .ಹೀಗೆ ..

ಹಾಗಿದ್ದರೆ ಹೆಣ್ಣು ಎಲ್ಲಿ ನಿರಾತಂಕವಾಗಿ ಬದುಕಬಹುದು? ಎಂಬುದು ನನ್ನ ಪ್ರಶ್ನೆ ಪ್ರಶ್ನೆಗಳ ಜೊತೆ ನಾನಿಲ್ಲಿ ನಿಂತಿದ್ದೇನೆ. ಕೆಲವು ಸಂಘಟನೆಗಳು ಮುರುಘಾ ಶ್ರೀ ಬಂಧನವನ್ನು ವಿರೋಧಿಸುತ್ತಿದ್ದಾರೆ. ತಪ್ಪಿತಸ್ಥ ಅಲ್ಲದೇ ಹೋದರೆ ಅದು ತಾನಾಗೇ ಸಾಭೀತಾಗುತ್ತದೆ. ಅದಕ್ಕೆ ಯಾರ ಬೆಂಬಲದ ಅಗತ್ಯವಿಲ್ಲ. ಅದು ಬಿಟ್ಟು ಹೀಗೆ ಬಂಧನದ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಕೂಡ ಶಿಕ್ಷಿಸಬೇಕು.

ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಮತ್ತೆ ಮತ್ತೆ ಇಂಥ ಘಟನೆಗಳು ಜರುಗುತ್ತಲೇ ಇವೆ. ಸರಕಾರ ಇಂಥ ಚಟುವಟಿಕೆ ವಿರುದ್ಧ ಸೂಕ್ತ ಕ್ರಮಕೈಗೊಂಡು ನಮ್ಮ ಹೆಣ್ಣುಮಕ್ಕಳು ಧೈರ್ಯಯುತರಾಗಿ ಬದುಕುವುದಕ್ಕೆ ಅನುವು ಮಾಡಿಕೊಡಬೇಕು ಎಂದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker